ಹಡಪದ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಮಂಡಳಿಗೆ ಸಮರ್ಪಕ ಅನುದಾನ ಒದಗಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಲಬುರಗಿ ತಾಲೂಕ ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಚಂದ್ರಶೇಖರ ತೋನಸನಹಳ್ಳಿ (ಟಿ), ಹಡಪದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂಬರುವ ಬಜೆಟ್ನಲ್ಲಿ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಮಂಡಳಿಗೆ ₹100 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಸಮಾಜದ ಜನರು ಹಗಲು–ರಾತ್ರಿ ಎಂಬ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಿದ್ದರೂ, ನಿಷೇಧಿತ ಪದವಾಗಿರುವ ‘ಹಜಾಮ’ ಪದವನ್ನು ಇನ್ನೂ ಕೆಲವರು ಬಳಸುತ್ತಿರುವುದು ನೋವಿನ ಸಂಗತಿ. ಈ ಕುರಿತು ಕಾನೂನು ಪ್ರಕಾರ ಅಟ್ರಾಸಿಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೇಳಿದರು.
ಸಂಘದ ಪ್ರಮುಖ ಬೇಡಿಕೆಗಳಲ್ಲಿ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ, ಸಮಾಜದ ಒಬ್ಬರನ್ನು ನಿಗಮ ಮಂಡಳಿಯ ನಿರ್ದೇಶಕರಾಗಿ ನಾಮನಿರ್ದೇಶನ ಮಾಡುವುದು, ಕಲಬುರಗಿ ವಿಶ್ವವಿದ್ಯಾಲಯದಲ್ಲಿರುವ ಹಡಪದ ಅಪ್ಪಣ್ಣ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣ, ಹಳ್ಳಿಗಳಲ್ಲಿರುವ ಬಡ ಹಡಪದ ಕ್ಷೌರಿಕರಿಗಾಗಿ ಕ್ಷೌರ ಕುಟೀರಗಳ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಇದಲ್ಲದೆ ಬಸವಕಲ್ಯಾಣದಲ್ಲಿರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿಗೊಳಿಸುವುದು ಹಾಗೂ ಮಸುಬಿನಾಳ ಮತ್ತು ದೇಗಿನಾಳ ಗ್ರಾಮಗಳಲ್ಲಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ತಾಯಿಯವರ ಜನ್ಮಸ್ಥಳಗಳನ್ನು ಅಭಿವೃದ್ಧಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಾಲಬ್ರಹ್ಮಚಾರಿ ರಾಜಶೀವಯೋಗಿಗಳು, ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ವಿನೋದ ಅಂಬಲಗಾ, ರಮೇಶ ಕವಲಗಾ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಸಾವಳಗಿ, ಭಗವಂತ ಕಿರಣಗಿ, ರಮೇಶ ನೀಲೂರ, ರುದ್ರಮಣಿ ಬಿಟಗೇರಾ, ಮಲ್ಲಣ್ಣ ಫರತಾಬಾದ, ಬಸವರಾಜ ಹಳ್ಳಿ, ಶಿವಶರಣಪ್ಪ ಹಾಗರಗಿ, ಆನಂದ ಖೇಳಗಿ, ಸಂತೋಷ ಬಗದೂರಗಿ, ಮಹಾಂತೇಶ ಇಸ್ಲಾಂಪೂರೆ, ಮಲ್ಲಿಕಾರ್ಜುನ ಸುಗೂರ ಎನ್, ಸುನೀಲಕುಮಾರ ಬಾಗಹಿಪ್ಪರಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



