ಆರ್ಎಸ್ಎಸ್ಗೆ ಪಥಸಂಚಲನಕ್ಕೆ ಅನುಮತಿ ಕೊಡಬಾರದು” – ದಲಿತ ಸಂಘರ್ಷ ಸಮಿತಿಯ ಆಗ್ರಹ

ಯಾದಗಿರಿ, :ಯಾದಗಿರಿ ಜಿಲ್ಲೆಯ ಕೆಂಬಾವಿ ಪಟ್ಟಣದಲ್ಲಿ ನವೆಂಬರ್ 4ರಂದು ಆರ್ಎಸ್ಎಸ್ ಪಥಸಂಚಲನ ನಡೆಸಲು ಉದ್ದೇಶಿಸಿ ತಾಲೂಕು ಆಡಳಿತಕ್ಕೆ ಸಂಘದ ವತಿಯಿಂದ ಅರ್ಜಿ ಸಲ್ಲಿಸಲಾಗಿದೆ.
ಆದರೆ, ಇದರ ಬೆನ್ನಲ್ಲೇ ದಲಿತ ಸಂಘರ್ಷ ಸಮಿತಿಯು ಕೂಡ ಅಂದೇ ತಮ್ಮ ಸಂಘಟನೆಯಿಂದ ಸಂವಿಧಾನ ಪೀಠಿಕೆ ಹಿಡಿದು ಜಾಥಾ ನಡೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದೆ.
ಎರಡು ಸಂಘಟನೆಗಳ ಬೇಡಿಕೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಶಾಂತಿ ಸೌಹಾರ್ದ ಸಭೆ ನಡೆಸಿ ವಿವಾದ ಪರಿಹಾರಕ್ಕೆ ಪ್ರಯತ್ನ ಮಾಡಿದರೂ, ಸಭೆ ಫಲಕಾರಿಯಾಗಲಿಲ್ಲ.
ದಲಿತ ಸಂಘರ್ಷ ಸಮಿತಿಯು ಆರ್ಎಸ್ಎಸ್ ನೋಂದಣಿಯಾಗದ ಸಂಸ್ಥೆ ಎಂದು ಆರೋಪಿಸಿ, “ದಂಡ ಹಿಡಿದು ಪಥಸಂಚಲನ ನಡೆಸುವುದು ಜನರಲ್ಲಿ ಭಯದ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅವರಿಗೆ ಅನುಮತಿ ನೀಡಬಾರದು. ನೀಡಿದರೆ ನಮಗೂ ಸಂವಿಧಾನ ಪೀಠಿಕೆ ಹಿಡಿದು ಜಾಥಾ ಮಾಡಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದೆ.
ಆದರೆ ಆರ್ಎಸ್ಎಸ್ ಮುಖಂಡರು “ಗಣವೇಶದ ಭಾಗವಾಗಿ ದಂಡ ಮುಖ್ಯ ಚಿಹ್ನೆ. ಅದನ್ನು ಬಿಟ್ಟು ಪಥಸಂಚಲನ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಂತಿ ಸಭೆ ವಿಫಲವಾಗಿ, ತಾಲೂಕು ಆಡಳಿತ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಹಲವೆಡೆ ಇದೇ ರೀತಿಯ ತೀವ್ರತೆ ಕಂಡುಬರುತ್ತಿದ್ದು, ದಲಿತ ಸಂಘಟನೆಗಳು ಆರ್ಎಸ್ಎಸ್ ನ ‘ದ್ವೇಷ ರಾಜಕಾರಣ’ ಹಾಗೂ ಸನಾತನವಾದದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದೆ ಎಂದು ಆರೋಪಿಸುತ್ತಿವೆ.
ಇದರಿಂದ ಆರ್ಎಸ್ಎಸ್ ಮತ್ತು ದಲಿತ ಸಂಘಟನೆಗಳ ನಡುವಿನ ಮುಖಾಮುಖಿ ಸನ್ನಿವೇಶಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೇದಿಕೆ ಸಿದ್ಧವಾಗಿದೆ.



