ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ:ನಿಂಗಪ್ಪಆರ್ ದೇವಣಗಾಂವ ಖಂಡನೆ

ಕಲಬುರಗಿ : ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಇದೇ ವರ್ಷ ಸ್ಥಾಪನೆಗೊಂಡು ಉದ್ಘಾಟನೆಯಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕೆಲವು ಸಮಾಜಘಾತಕ ಶಕ್ತಿಗಳು ನಿನ್ನೆ ರಾತ್ರಿ ಭಗ್ನಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದೆ ಎಂದು ಕರ್ನಾಟಕ ಕೋಲಿ ಸೈನ್ಯದ ರಾಜ್ಯಾಧ್ಯಕ್ಷ ನಿಂಗಪ್ಪ ಆರ್. ದೇವಣಗಾಂವ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿಜಶರಣ ಶ್ರೀ ಅಂಬಿಗರ ಚೌಡಯ್ಯರು ಮಹಾನ್ ಶರಣರು. ಅವರು ಯಾವುದಕ್ಕೂ ಸೀಮಿತ ವ್ಯಕ್ತಿಗಳಲ್ಲ ಸಮಸ್ತ ಮಾನವ ಸಮಾಜಕ್ಕೆ ಮಾರ್ಗದರ್ಶಕರು. ಅವರ ಮೂರ್ತಿಯನ್ನು ಭಗ್ನಗೊಳಿಸಿರುವುದು ಕೋಲಿ-ಕಬ್ಬಲಿಗ ಸಮಾಜದ ಭಾವನೆಗೆ ನೇರವಾಗಿ ದಾಳಿ ಮಾಡಿದಂತಾಗಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ವಿಭಜನೆ ಮೂಡಿಸಲು ಪ್ರಯತ್ನಿಸುವ ದುಷ್ಕೃತ್ಯಕಾರರ ಕೃತ್ಯಗಳು. ಸರ್ಕಾರ ಮತ್ತು ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಅವರು ಆಗ್ರಹಿಸಿದರು.
“ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಸರ್ಕಾರದ ಸಹಕಾರದೊಂದಿಗೆ ತಕ್ಷಣ ಪುನಃ ನಿರ್ಮಿಸಬೇಕು. ಈ ಘಟನೆಗೆ ಕಾರಣರಾದವರ ವಿರುದ್ಧ ಮಾದರಿ ಕ್ರಮ ಕೈಗೊಂಡಾಗ ಮಾತ್ರ ಇಂತಹ ಕೃತ್ಯಗಳು ಮರುಕಳಿಸುವುದಿಲ್ಲ,” ಎಂದು ಹೇಳಿದ್ದಾರೆ.