ಪಾಲಿಕೆ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕುಂಠಿತ: ದೇವೇಂದ್ರ ದೇಸಾಯಿ ಕಲ್ಲೂರ್ ಆರೋಪ

ಕಸ ವಿಲೇವಾರಿ ಸರಿಯಾಗಿ ನಡೆಯದೇ ಬಡಾವಣೆಗಳು ದುರ್ಗಂಧದಿಂದ ಕಂಗೆಟ್ಟಿವೆ. ಟ್ರಾಫಿಕ್ ಸಮಸ್ಯೆ, ಒಳಚರಂಡಿ ಹಾಗೂ ಗಾರ್ಬೇಜ್ ಸಮಸ್ಯೆಗಳು ತೀವ್ರಗೊಂಡಿವೆ.ಇನ್ನಾದರೂ ಪಾಲಿಕೆ ಆಯುಕ್ತರು ಹಾಗೂ ಮೇಯರ್ ತಕ್ಷಣ ಕ್ರಮ ಕೈಗೊಂಡು ಕಲಬುರಗಿ ನಗರದ ಅಭಿವೃದ್ಧಿಗೆ ಮುಂದಾಗಬೇಕು.-ದೇವೇಂದ್ರ ದೇಸಾಯಿ ಕಲ್ಲೂರ್, ಬಿಜೆಪಿ ಒಬಿಸಿ ಮೋರ್ಚಾ ನಗರ ಅಧ್ಯಕ್ಷರು ಕಲಬುರಗಿ.
ಕಲಬುರಗಿ: ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ನೇತೃತ್ವದಲ್ಲಿ ಪಾಲಿಕೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ನಗರಾಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಂತಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ನಗರ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿರುವಂತೆ, ನಗರದಲ್ಲಿನ ರಸ್ತೆಗಳು ಅಭಿವೃದ್ಧಿ ಕಾಣದೆ ತಗ್ಗು–ಗುಂಡಿಗಳಿಂದ ತುಂಬಿಕೊಂಡಿವೆ. ಇದರ ಪರಿಣಾಮವಾಗಿ ವಾಹನ ಸವಾರರು ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅವರು ದೂರಿದರು.
ಇತ್ತೀಚೆಗೆ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 300 ಕೋಟಿ ರೂ.ಗಳ ಅಧಿಕ ಪರಿಹಾರ ಮೊತ್ತ ಪಾವತಿಸುವ ಪರಿಸ್ಥಿತಿ ಪಾಲಿಕೆಗೆ ಎದುರಾಗಿದೆ. ಪರಿಹಾರ ಮೊತ್ತ ಪಾವತಿಸಲು ವಿಫಲವಾದ ಹಿನ್ನೆಲೆ ಪಾಲಿಕೆಯ ಆಸ್ತಿಪಾಸ್ತಿಗಳು ಜಪ್ತಿಯಾಗಿರುವುದು ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಪಾಲಿಕೆಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿಯೂ ಶಿಥಿಲತೆ ಕಂಡುಬರುತ್ತಿದೆ ಎಂದು ಆರೋಪಿಸಿದರು. ನಗರದ ಅನೇಕ ಬಡಾವಣೆಗಳಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರು ಸರಬರಾಜಾಗಿಲ್ಲ. ಎಲ್ & ಟಿ ಕಂಪನಿಯವರು ರಸ್ತೆಗಳನ್ನು ಅಗೆದು ಮುಚ್ಚದೆ ಬಿಟ್ಟುಹೋಗಿರುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.



