ಸಿಜೆಐ ಗವಾಯಿ ಮೇಲೆ ಶೂ ಎಸೆತ ಪ್ರಯತ್ನ ಖಂಡಿಸಿ ವಕೀಲರ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ಘಟನೆಗೆ ಖಂಡನೆ ವ್ಯಕ್ತಪಡಿಸಿ, ಕಲಬುರಗಿಯ ವಕೀಲರು ಬುಧವಾರ ಕೋರ್ಟ್ ಕಾರ್ಯಗಳನ್ನು ಬಹಿಷ್ಕರಿಸಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೋರ್ಟ್ ಸಂಕೀರ್ಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ವಕೀಲರು ಎಸ್.ಬಿ. ಟೆಂಪಲ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಘೋಷಣೆ ಕೂಗಿದರು. ಬಳಿಕ ಸರ್ದಾರ್ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶೂ ಎಸೆದ ಘಟನೆ ಖಂಡಿಸಿದರು. ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯ ಎದುರಿನ ರಸ್ತೆಯಲ್ಲಿ ಅಂತ್ಯಗೊಂಡಿದ್ದು, ಅಲ್ಲಿ ಸಹ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ವಕೀಲರು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಉದ್ದೇಶಿಸಿ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಜಿಲ್ಲಾ ಘಟಕ ಮತ್ತು ಹೈಕೋರ್ಟ್ ಘಟಕದ ವಕೀಲರು ಜಂಟಿಯಾಗಿ ಪಾಲ್ಗೊಂಡಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಸಾರ, ಉಪಾಧ್ಯಕ್ಷ ಭೀಮಾಶಂಕರ ಪೂಜಾರಿ, ಆರತಿ ಎಂ. ರಾಠೋಡ, ಖಜಾಂಚಿ ಮಂಜುನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ ವಾಡಿ, ಜಂಟಿ ಕಾರ್ಯದರ್ಶಿ ಸುಧೀರ ಗಾದ್ದೆ, ಹೈಕೋರ್ಟ್ ಘಟಕದ ಉಪಾಧ್ಯಕ್ಷ ಅನಂತ ಜಾಹಗೀರದಾರ, ಪ್ರಧಾನ ಕಾರ್ಯದರ್ಶಿ ಗೌರೀಶ ಕಾಶೆಂಪುರ, ಖಜಾಂಚಿ ಮಂಜುನಾಥ ಗಿನ್ನಿ, ಜಂಟಿ ಕಾರ್ಯದರ್ಶಿ ರೇಖಾ ಪಾಟೀಲ,ಸಂತೋಷ ಪೂಜಾರಿ, ಅಶ್ವಿನಿ ಮದನ್ಕರ, ನವೀನ ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.