ನಿಜಶರಣ ಮೂರ್ತಿ ಅವಮಾನ ಖಂಡಿಸಿ ಬೃಹತ್ ಪ್ರತಿಭಟನೆ
ಶಹಾಬಾದ್ ರಸ್ತೆಯ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟನೆ

ಕಲಬುರಗಿ:ಶಹಾಬಾದ್ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಸೇವಾ ಸಂಘದ ದಕ್ಷಿಣ ಮತಕ್ಷೇತ್ರದ ತಾಲೂಕಾ ಅಧ್ಯಕ್ಷ ವೀರಭದ್ರಪ್ಪ ನಾಟೀಕಾರ ಅವರ ನೇತೃತ್ವದಲ್ಲಿ ಶಹಾಬಾದ್ ರಸ್ತೆಯ ಬಳಿ ಮಾನವ ಸರಪಳಿ ರೂಪಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರಪ್ಪ ನಾಟೀಕಾರ ಅವರು ಹೇಳಿದರು —“೧೨ನೇ ಶತಮಾನದ ಸಮತಾವಾದಿ, ಮಾನವತಾವಾದಿ, ಸ್ವೀವಾದಿ, ಕ್ರಾಂತಿಕಾರಿ ವಚನಕಾರರಾದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅವಮಾನ ಮಾಡಿದ ಕೃತ್ಯ ತುಂಬಾ ಹೇಯವಾಗಿದೆ. ಇಂಥ ಮಹಾನ್ ಮಹಾಪುರುಷರ ವಿಚಾರಗಳು ಈ ದೇಶದ ಆಸ್ತಿಯಾಗಿವೆ. ಅವರನ್ನು ಅವಮಾನಿಸುವುದು ದೇಶವನ್ನೇ ಅವಮಾನಿ ಸುವಂತಾಗಿದೆ,” ಎಂದು ಖಂಡಿಸಿದರು.
ಅವರು ಮುಂದುವರಿದು ಹೇಳಿದರು, “ಮುತ್ತಗಾ ಗ್ರಾಮದಲ್ಲಿ ೦೮-೧೦-೨೦೨೫ ರಂದು ನಡೆದ ಈ ಘಟನೆಯಲ್ಲಿನ ಕಿಡಿಗೇಡಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಪುತ್ಥಳಿಯ ದುರಸ್ತಿ ಕಾರ್ಯ ತಕ್ಷಣ ಪ್ರಾರಂಭವಾಗಬೇಕು. ಇದೇ ರೀತಿಯ ಘಟನೆಗಳು ಮುಂದುವರಿಯದಂತೆ ಪ್ರತಿಯೊಂದು ಪುತ್ಥಳಿಯ ಹತ್ತಿರ ಸಿಸಿ ಟಿವಿ ಅಳವಡಿಸಿ, ಪೊಲೀಸ್ ಗಸ್ತು ಬಲಪಡಿಸಬೇಕು,” ಎಂದರು.
ಈ ಪ್ರತಿಭಟನೆಯಲ್ಲಿ ಗುಂಡಪ್ಪ ಎಂ. ಭಂಕೂರ, ದಶರಥ ತೆಗನೂರ, ರಾಕೇಶ್ ಜಮಾದಾರ, ಮದನ ಯಾಗಾಪೂರ, ವಿಜಯಕುಮಾರ ನಾಟೀಕಾರ, ಗಣಪತಿ ಮಾಣಿಕ, ರಾಮಲಿಂಗಗೌಡ ಸಾಹೇಬಗೌಡ, ರಾಜು ಧರ್ಮಾಪೂರ, ವಿಶ್ವರಾಧ್ಯ ಲಿಂಗಪ್ಪ ತಳವಾರ, ಬೆಳ್ಳೆಪ್ಪ ಇಂಗನಕಲ್, ಪ್ರೇಮ ಕೋಲಿ, ಜಗನ್ನಾಥ ಹತ್ತಿ, ಪಿತಂಬರ ಕೋಲಿ, ಬಸಣ್ಣ ನಿಂಬರ್ಗಿ, ಮಲ್ಲಿಕಾರ್ಜುನ ಈರಣ್ಣ, ಸುಧಾಕರ ಶಂಕರ, ನಾಗರಾಜ ಕೋಲಿ, ಹಣಮಂತ ನಾಯಕೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.