ಕು. ವೈಶಾಲಿ ನಾಟಿಕಾರ್ ಅವರಿಗೆ ‘ಬೆಸ್ಟ್ ಫಿಸಿಕಲ್ ಎಜುಕೇಶನ್ ಟ್ರೈನರ್ 2025’ ಪ್ರಶಸ್ತಿ

ಕಲಬುರಗಿ: ಶರಣಬಸವೇಶ್ವರ್ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾಗಿ ವಿದ್ಯಾರ್ಥಿಗಳಿಗೆ ಮಾದರಿ ತರಬೇತಿ ನೀಡುತ್ತಿರುವ ಕು. ವೈಶಾಲಿ ನಾಟಿಕಾರ್ ರವರು, ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಶ್ರೇಷ್ಠ ಸೇವೆಯನ್ನು ಗುರುತಿಸಿ ‘ಬೆಸ್ಟ್ ಫಿಸಿಕಲ್ ಎಜುಕೇಶನ್ ಟ್ರೈನರ್ 2025’ ಗೌರವಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಮೂಲದ ನಮ್ಮ ಸಂಕಲ್ಪ ಫೌಂಡೇಶನ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ವೈಶಾಲಿ ನಾಟಿಕಾರ್ ರವರು ಜಮ್ಮು-ಕಾಶ್ಮೀರದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪೆಂಕಾಕ್ ಸಿಲಾಟ್ ಸ್ಪರ್ಧೆಯಲ್ಲಿ ಕಲಬುರಗಿಯನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಕಲಬುರಗಿಯ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಎತ್ತಿ ಹಿಡಿದಿದ್ದಾರೆ.
ಇದೇ ಅಲ್ಲದೆ ಅವರು 2025ರ 70ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ, ಹಾಗೂ ಹುಬ್ಬಳ್ಳಿಯ ಎಸ್ಜೆಎಮ್ವಿಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಅಂತರ್ ಮಹಾವಿದ್ಯಾಲಯಗಳ ಕುಸ್ತಿ ಮತ್ತು ವುಷು ಸ್ಪರ್ಧೆಗಳಲ್ಲಿ ಬಂಗಾರ ಮತ್ತು ರಜತ ಪದಕಗಳನ್ನು ಗಳಿಸಿ ಮಹಾವಿದ್ಯಾಲಯಕ್ಕೆ ವಿಶಿಷ್ಟ ಮಾನ-ಪ್ರತಿಷ್ಠೆಯನ್ನು ತಂದುಕೊಟ್ಟಿದ್ದಾರೆ.
ವಿದ್ಯಾರ್ಥಿಗಳ ದೈಹಿಕ–ಮಾನಸಿಕ ಅಭಿವೃದ್ಧಿಗಾಗಿ ನೀಡಿದ ಅವರ ಶಿಸ್ತಿನ ತರಬೇತಿ, ಸಮರ್ಪಿತ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ, ಈ ಗೌರವಾನ್ವಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭವು 06-12-2025 ರಂದು ಬೆಂಗಳೂರಿನ ಹೈಡ್ ಪಾರ್ಕ್ ಖಾಸಗಿ ಹೋಟೆಲ್ನಲ್ಲಿ ಭವ್ಯವಾಗಿ ನೆರವೇರಿತು. ಕು. ವೈಶಾಲಿ ನಾಟಿಕಾರ್ ಅವರ ಸಾಧನೆಗೆ ಎಲ್ಲಾ ವರ್ಗಗಳಿಂದ ಅಭಿನಂದನೆಗಳ ಹರಿದು ಬರುತ್ತಿವೆ.



