ಕುಡುಒಕ್ಕಲಿಗ ಸಮಾಜದಿಂದ ಸಿದ್ರಾಮೇಶ್ವರ–ಲಿಂಗರಾಜ ದೇಸಾಯಿ ಜಯಂತ್ಯೋತ್ಸವ
ಹಿತ್ತಲಶೀರೂರಲ್ಲಿ ಕುಡುಒಕ್ಕಲಿಗ ಸಮಾಜದ ವತಿಯಿಂದ ಸಂಯುಕ್ತ ಜಯಂತ್ಯೋತ್ಸವ

ಕಲಬುರಗಿ: ಆಳಂದ ತಾಲೂಕಿನ ಹಿತ್ತಲಶೀರೂರ ಗ್ರಾಮದಲ್ಲಿ ಕುಡುಒಕ್ಕಲಿಗ ಸಮಾಜದ ವತಿಯಿಂದ ಶ್ರೀ ಸಿದ್ರಾಮೇಶ್ವರರ 854ನೇ ಹಾಗೂ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತ್ಯೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ವಿಜಯಪುರ ಜಿಲ್ಲೆಯ ಕೌವಲಗಿ ಗ್ರಾಮದ ಜಗದ್ಗುರು ಶ್ರೀಶಿವಯೋಗಿ ಸಿದ್ದರಾಮೇಶ್ವರ ಕುಡುಒಕ್ಕಲಿಗ ಮಹಾ ಸಂಸ್ಥಾನ ಗುರುಪೀಠದ ಪ.ಪೂ.ಜ. ಡಾ. ಅಭಿನವ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹಾಗೂ ಅಲ್ಲಮಪ್ರಭುಲಿಂಗೇಶ್ವರ ಪೀಠಾಧಿಪತಿ ಶ್ರೀ ಓಂಕಾರ ಒಡೆಯರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಾ. ಅಭಿನವ ಶ್ರೀಗಳು ಮಾತನಾಡಿ, ಕುಡುಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಸಂಘಟನೆಗೆ ಬೆಂಬಲ ನೀಡಿದಾಗ ಮಾತ್ರ ಗ್ರಾಮಾಂತರದಿಂದ ರಾಜ್ಯ ಮಟ್ಟದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸೇವಾ ಸಂಘದ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಸಮುದಾಯದ ಬೆಳವಣಿಗೆಗಾಗಿ ಗ್ರಾಮಮಟ್ಟದಲ್ಲೇ ಇಂತಹ ಕಾರ್ಯಕ್ರಮಗಳು ಅಗತ್ಯವಿವೆ ಎಂದು ಹೇಳಿದರು.
ಡಾ. ರಾಜಕುಮಾರ ಪಾಟೀಲ ಹೆಬ್ಬಳಿ, ಮಾಣಿಕಮ್ಮ ಚಿಲ್ಲೂರು ಹಾಗೂ ರಾಜ್ಯ ಅಧ್ಯಕ್ಷ ಶಿವರಾಜ ಎ. ಪಾಟೀಲ ಕಲಗುರ್ತಿ ಮಾತನಾಡಿ, ಸರ್ಕಾರಿ ಸೌಲಭ್ಯ, ಮೀಸಲಾತಿ ಮತ್ತು ರಾಜಕೀಯ ಪ್ರತಿನಿಧಿತ್ವಕ್ಕಾಗಿ ಸಮುದಾಯದ ಸಂಘಟನೆ ಬಲಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಗಣ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



