ನಾಳೆ ಸಿದ್ಧರಾಮ ಶಿವಯೋಗಿಗಳ 75 ನೇ ಪುಣ್ಯಾರಾಧನೆ

ಜೇವರ್ಗಿ : ತಾಲೂಕಿನ ಶಖಾಪುರ ಎಸ್.ಎ ಗ್ರಾಮದ ಸದ್ಗುರು ವಿಶ್ವಾರಾಧ್ಯ ತಪೋವನ ಮಠದ ಲಿಂ. ಸಿದ್ಧರಾಮ ಶಿವಯೋಗಿಗಳ 75 ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆಯನ್ನು 12 ಭಾನುವಾರದಂದು ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಡಾ. ಸಿದ್ಧರಾಮ ಶಿವಾಚಾರ್ಯರು ತಿಳಿಸಿದ್ದಾರೆ.
ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಪ್ರಸಾದಕ್ಕೆ 35 ಕ್ವಿಂಟಲ್ ಜೋಳ ಮತ್ತು ಸಜ್ಜಿ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ. ಸುಮಾರು 15 ಕ್ವಿಂಟಾಲ ವಿವಿಧ ಧಾನ್ಯ ಹಾಗೂ ತರಕಾರಿಗಳಿಂದ ಭಜಿ ಪಲ್ಯೆ ಸಿದ್ಧಪಡಿಸಲಾಗುತ್ತಿದೆ. ಸಹಸ್ರಾರು ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುಣ್ಯರಾಧನೆ ನಿಮಿತ್ತ ಭಾನುವಾರ ಬೆಳಿಗ್ಗೆ 6 ಕ್ಕೆ ಲಿಂ.ಸಿದ್ಧರಾಮ ಶಿವಯೋಗಿಗಳ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕಿ ಉತ್ಸವ ನಡೆಯಲಿದೆ.
ಭಾನುವಾರ ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಸಭೆಗೆ ಆಂದೋಲಾ ಶ್ರೀ, ನೆಲೋಗಿ ಶ್ರೀ, ಪಾಳಾ ಶ್ರೀ ಸೇರಿದಂತೆ ಸಚಿವರಾದ ಶರಣಪ್ರಕಾಶ ಪಾಟೀಲ್, ಶರಣಬಸಪ್ಪಗೌಡ ದರ್ಶನಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಶಾಸಕ ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಬಸವರಾಜ ಮತ್ತಿಮೂಡ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಶಿವರಾಜ ಪಾಟೀಲ್ ರದ್ದೇವಾಡಗಿ ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲ್ಲಿದ್ದಾರೆ ಎಂದು ಅವರು ಹೇಳಿದರು.