ಚುನಾವಣಾ ಅಕ್ರಮ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಧರಣಿ

ಕಲಬುರಗಿ : ಆಳಂದ ತಾಲ್ಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣಾ ಅಕ್ರಮದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಕೆಕೆಆರ್ಡಿಬಿ ಎದುರು ಧರಣಿ ನಡೆಸಲಾಯಿತು.
ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯಚುನಾವಣೆಗೊಂದಲದ ಗೂಡಾಗಿದ್ದು, ಚುನಾವಣಾ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡಲು ಚುನಾವಣಾ ಅಕ್ರಮ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಆದ್ದರಿಂದ ಚುನಾವಣಾ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು, ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಚುನಾವಣೆ ನಡೆಸಬೇಕು, ಕಲಬುರಗಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಕಾರ್ಯಾಲಯ ಕಾರ್ಖಾನೆಯ ಆವರಣದಲ್ಲಿಯೇ ಪ್ರಾರಂಭಿಸಬೇಕು,ಮತದಾರರ ಪಟ್ಟಿ ಮರು ಪರಿಶೀಲನೆಯಾಗಬೇಕು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು, ರೈತರು ತಮ್ಮ ಷೇರು ಮೌಲ್ಯದ ವ್ಯತ್ಯಾಸ ಹಣ ಭರಿಸಿದ್ದು, ಅಂತಹ ರೈತರಿಗೆ ಮತದಾನದ ಹಕ್ಕನ್ನು ಕೊಡಬೇಕು, ಚುನಾವಣೆ ಪ್ರಕ್ರಿಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಬೇಕು, ಮತದಾರರ ಪಟ್ಟಿಯಲ್ಲಿ ಆಗಿರುವ ಅಕ್ರಮದ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಚಂದ್ರಶೇಖರ ಹಿರೇಮಠ, ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಬಿಜೆಪಿ ಮುಖಂಡರಾದ ಅಂಬಾರಾಯ ಅಷ್ಟಗಿ, ರವಿಚಂದ್ರ ಕಾಂತಿಕರ, ಪ್ರಕಾಶ ಸಣಮನಿ, ಆನಂದರಾವ ಪಾಟೀಲ, ಅಶೋಕ ಹತ್ತರಕಿ, ಶಿವರಾಜ ಪಾಟೀಲ, ನಾಗರಾಜ ಶೇಗಜಿ, ಹರ್ಷವರ್ಧನ ಗುಗಳೆ, ನೀಲಕಂಠರಾವ ಪಾಟೀಲ, ಶಂಕರ ಸೋಮಾ, ವೀರಣ್ಣಾ ಸಕ್ಕರಗಿ, ಶರಣಬಸಪ್ಪಾ ಹೀರಾ, ಧನಂಜಯ ಕುಲಕರ್ಣಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



