ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದು ತುಂಬಾ ಅಪಾಯಕಾರಿ :ವಿಶ್ವರಾಧ್ಯ ಶ್ರೀ

ಅಫಜಲಪುರ: ಪಟ್ಟಣದ ಶ್ರೀ ಶಿವಲಿಂಗೇಶ್ವರ ಬಾಲ ಭಾರತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಿವಲಿಂಗೇಶ್ವರ ಪ್ರೌಢ ಶಾಲೆಗಳ 37ನೇ ವಾರ್ಷಿಕ ಸ್ನೇಹ ಸಮ್ಮೇಳನವು ಗುರುವಾರ ಸಂಜೆ 7 ಗಂಟೆಗೆ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾ ಗಿ ಜರುಗಿತು.
ಅಫಜಲಪುರ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಪರಂ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನದತಮ್ಮ ಸಂದೇಶದಲ್ಲಿ ಶ್ರೀಗಳು, “ಈ ಶಿಕ್ಷಣ ಸಂಸ್ಥೆ ಹೆಮ್ಮರದಂತೆ ಬೆಳೆದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದು ಅಪಾಯಕಾರಿಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ವಿಚಾರಶೀಲತೆ, ಆಚಾರ-ವಿಚಾರ ಮತ್ತು ಒಳ್ಳೆಯ ಭಾವನೆಗಳನ್ನು ನೀಡುವುದು ತಂದೆ-ತಾಯಿಗಳ ಕರ್ತವ್ಯ,” ಎಂದು ಸ್ಪಷ್ಟ ಸಂದೇಶ ನೀಡಿದರು.
ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಪೋಷಕರ ಮೆಚ್ಚುಗೆಗೆ ಪಾತ್ರವಾದವು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು.ಒಟ್ಟಾರೆ, ಶೈಕ್ಷಣಿಕ ಸಾಧನೆ ಮತ್ತು ಸಂಸ್ಕಾರಪರ ಸಂದೇಶಗಳ ಸಂಯೋಜನೆಯೊಂದಿಗೆ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಿಂಬಾಳ, ಕಾರ್ಯದರ್ಶಿ ಮಳೇಪ್ಪ ಸಿ. ಡಾಂಗೆ, ಉಪಾಧ್ಯಕ್ಷ ಮಹಾದೇವಪ್ಪ ಕಲಕೇರಿ, ಸದಸ್ಯರಾದ ಶಂಕ್ರಯ್ಯ ಹಿರೇಮಠ, ಸಂಗಪ್ಪ ನೂಲಾ, ಮಲ್ಲಿಕಾರ್ಜುನ ಕಣ್ಣಿ, ಮಹಾಂತೇಶ ಮಸಳಿ, ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿ ಸಿದ್ದಪ್ಪ ಬಿರಾದಾರ ಹಾಗೂ ಬಿ.ಆರ್.ಪಿ. ವಿಠಲ ಹಡಪ, ಪ್ರಾಥಮಿಕ ಶಾಲೆ ಮುಖ್ಯ ಗುರು ಮನೋಜಕುಮಾರ ವಾಲಿ ಉಪಸ್ಥಿತಿರಿದ್ದರು.
ಸಂಸ್ಥೆಯ ಆಡಳಿತ ಅಧಿಕಾರಿಗಳು ಅಂಬೇಡ್ಕರ್ ತಳಕೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಸಿದ್ದು ಉಡಚಣ ಹಾಗೂ ಅಣವೀರಯ್ಯ ಹಿರೇಮಠ ನಿರೂಪಿಸಿದರು. ಮತ್ತ ಸುಜಾತ ಬಿರಾದಾರ ವಂದಿಸಿದರು.



