ಕುಡಿಯುವ ನೀರಿಗೆ ಆಗ್ರಹಿಸಿ ಪೊರಕೆ–ಖಾಲಿ ಕೊಡಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಕಲಬುರಗಿ:ಭಾರತ ಮುಕ್ತಿ ಮೊರ್ಚಾ ಸಂಘಟನೆ ಹಾಗೂ ಮೂಲನಿವಾಸಿ ಮಹಿಳಾ ಸಂಘದ ನೂರಾರು ಮಹಿಳಾ–ಪುರುಷ ಕಾರ್ಯಕರ್ತರು ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಕೈಯಲ್ಲಿ ಪೊರಕೆ ಹಾಗೂ ಖಾಲಿ ಕೊಡಗಳನ್ನು ಹಿಡಿದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಚಿಂಚೋಳಿ ತಾಲೂಕಿನ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.17ರ ಆಶ್ರಯ ಕಾಲೂನಿ ಹಾಗೂ ವಿದ್ಯಾನಗರ ಬೆಳ್ಳಿ ಬೆಳಕು ಕಾಲೂನಿಗಳಲ್ಲಿ ದಿನಕೂಲಿಕಾರರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಕಾಲೂನಿಗಳಲ್ಲಿ ಬಹುದಿನಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸಮಸ್ಯೆ ಸರಿಪಡಿಸುವಂತೆ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕುಡಿಯುವ ನೀರಿಗಾಗಿ ಜನರು ಪ್ರತಿದಿನ ಖಾಲಿ ಕೊಡಗಳನ್ನು ಹಿಡಿದು ಬಿಕ್ಷುಕರೆಂತೆ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ದಯವಿಟ್ಟು ತಕ್ಷಣ ಮಧ್ಯಪ್ರವೇಶಿಸಿ ಆಶ್ರಯ ಕಾಲೂನಿ ಹಾಗೂ ವಿದ್ಯಾನಗರ ಬೆಳ್ಳಿ ಬೆಳಕು ಕಾಲೂನಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೋರಾಟದ ಮೂಲಕ ಹಕ್ಕೋತ್ತಾಯ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಮಾರುತಿ ಗಂಜಗಿರಿ, ಜಗನ್ನಾಥ ರಾಮತಿರ್ಥ, ಸಿದ್ದು ರಂಗನೂರ, ಲೋಹಿತ, ಹರೀಷ ದೇಗಲ್ಮಡಿ, ವಸಂತ ಮೋತಕಪಳ್ಳಿ, ಅಕ್ಕಮ್ಮಾ, ನಾಗಮ್ಮ, ಸಾಯದಬಿ, ಸುಮಿತ್ರಾ, ಶ್ಯಾಮ, ನೀಲಮ್ಮಾ, ವಿಜಯಲಕ್ಷ್ಮೀ, ಅನೀತಾ, ಪ್ರಭಾವತಿ, ಗಂಗಮ್ಮಾ, ತೇಜಮ್ಮಾ, ರೇಣುಕಾ, ಕಮಲಮ್ಮಾ, ಕೌಸಂಬಿ, ಶಿವಾನಂದ, ಪಾರಮ್ಮಾ, ದ್ರೌಪತಿ, ಅಂಬಮ್ಮಾ, ಹೂವಮ್ಮಾ, ಕಾಶಮ್ಮಾ, ಕಲಾವತಿ, ಬುಜ್ಜಮ್ಮಾ, ರಮಾಬಾಯಿ, ಸುನಂದ, ಈರಮ್ಮಾ, ರುಕಸನಾ, ಈಶ್ವರಿ, ಜಗಮ್ಮಾ, ರೂಪಾಲಿಬಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



