“ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನದಾನ ಅತ್ಯುನ್ನತ ಸೇವೆ” : ರಾಜಶೇಖರಯ್ಯ ಹಿರೇಮಠ್
ಕೆಂಭಾವಿಯಿಂದ ಶ್ರೀಶೈಲ ಪಾದಯಾತ್ರೆಗೆ ಮಹಾಪ್ರಸಾದ ಸೇವೆ

ಕೆಂಭಾವಿ: ಪಾದಯಾತ್ರಿಗಳಿಗೆ ಅನ್ನ ನೀಡುವುದು ಅತ್ಯುನ್ನತ ದಾನವಾಗಿದ್ದು, ಅದು ಭಕ್ತಿ ಮತ್ತು ಸೇವಾಭಾವನೆಯ ಸಂಕೇತವಾಗಿದೆ ಎಂದು ರಾಜಶೇಖರಯ್ಯ ಹಿರೇಮಠ್ ಹೇಳಿದರು.
ಕೆಂಭಾವಿಯ ಸಮಸ್ತ ಸದ್ಭಕ್ತರಿಂದ ಶ್ರೀಶೈಲಂ ದೇವಾಲಯ ಪಾದಯಾತ್ರಿಗಳಿಗೆ ನಾಲ್ಕನೇ ವರ್ಷದ ಮಹಾಪ್ರಸಾದ ವ್ಯವಸ್ಥೆ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, “ಇದು ಕೆಂಭಾವಿ ಪಟ್ಟಣದ ಘನತೆ ಮತ್ತು ಕೀರ್ತಿಯನ್ನು ಎತ್ತಿ ಹಿಡಿಯುವ ಕಾರ್ಯವಾಗಿದೆ. ಪಟ್ಟಣದ ಎಲ್ಲರೂ ತನು–ಮನ–ಧನಗಳಿಂದ ಸಹಕರಿಸಿ ಈ ಸೇವೆಯನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಮಾರ್ಚ್ 05-03-2026ರಿಂದ ಪ್ರಾರಂಭವಾಗುವ ಪಾದಯಾತ್ರೆಗಳ ಅಂಗವಾಗಿ, ತಾ. ದೇವದುರ್ಗ, ಜಿ. ರಾಯಚೂರಿನ ರಾಮದುರ್ಗ ಕ್ರಾಸ್ನಲ್ಲಿ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪಾದಯಾತ್ರೆಯಲ್ಲಿ ಭಕ್ತರು ದೀರ್ಘ ಪಯಣ ಕೈಗೊಳ್ಳುವುದರಿಂದ, ಉಚಿತ ಭೋಜನ, ನೀರು ಹಾಗೂ ವಿಶ್ರಾಂತಿ ಸೌಲಭ್ಯಗಳು ಭಕ್ತರಿಗೆ ಅತ್ಯಂತ ಸಹಾಯಕವಾಗುತ್ತವೆ ಎಂದು ಅವರು ಹೇಳಿದರು.
“ಅನ್ನವು ಜೀವನದ ಮೂಲ. ಪಾದಯಾತ್ರಿಗಳಿಗೆ ಉಚಿತವಾಗಿ ಭೋಜನ ನೀಡುವುದು ದೇವರ ಸೇವೆಯಂತೆಯೇ. ಇದು ದಾನದಾತರಿಗೆ ಪುಣ್ಯ ಫಲ ನೀಡುತ್ತದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 24 ಗಂಟೆಗಳ ಪ್ರಸಾದ ವ್ಯವಸ್ಥೆ ಇರಲಿದ್ದು, ವೈದ್ಯಕೀಯ ತಪಾಸಣೆ, ಅಗತ್ಯ ಮಾತ್ರೆಗಳು, ಬಿಸಿ ನೀರಿನ ಸೌಲಭ್ಯ, ಶುಚಿಯಾದ ಊಟ, ಕುಡಿಯುವ ನೀರು, ಹಣ್ಣುಗಳು ಹಾಗೂ ವಿಶ್ರಾಂತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ನಂತರ ಕೆಂಭಾವಿಯಿಂದ ಪಾದಯಾತ್ರೆಗಾಗಿ ತೆರಳುವ ವಾಹನಗಳಿಗೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಡಿವಾಳಪ್ಪ ಗೌಡ ಪೊಲೀಸ್ ಪಾಟೀಲ್, ಬಾಪುಗೌಡ ಪೊಲೀಸ್ ಪಾಟೀಲ್, ಗುರುಲಿಂಗಯ್ಯ, ರಮೇಶ್ ಸೊನ್ನದ, ಮಲ್ಲಣ್ಣ ಸಾಹು, ಮೈಪಾಲ್ ರೆಡ್ಡಿ ಡಿಗ್ಗಾವಿ, ಸಂಗಣ್ಣ ತುಂಬಿಗಿ, ಡಾ. ರವೀಂದ್ರ, ಗುರು ಕುಂಬಾರ, ಪ್ರಶಾಂತ, ರಮೇಶ್, ಮಹೇಶ್ ಅಂಗಡಿ ಸೇರಿದಂತೆ ಊರಿನ ಪ್ರಮುಖರು, ಮುಖಂಡರು, ಯುವಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




