ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂತೆಗೆದುಕೊಳ್ಳುವಂತೆ ಕರವೇ ಆಗ್ರಹ – ರಾಜ್ಯವ್ಯಾಪಿ ಧರಣಿ

ಕಲಬುರಗಿ: “ಕನ್ನಡ, ಕನ್ನಡಿಗ, ಕರ್ನಾಟಕ ನಮ್ಮ ಅಸ್ತಿತ್ವ-ಇದಕ್ಕಾಗಿ ಹೋರಾಡಿದವರ ತ್ಯಾಗ ವ್ಯರ್ಥವಾಗಬಾರದು” ಎಂದು ಕರವೇ ಕಲಬುರಗಿ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಹೇಳಿದರು. ಕನ್ನಡಪರ ಹೋರಾಟಗಾರರ ಹೋರಾಟ ಸುಲಭವಲ್ಲ; ಲಾಠಿಚಾರ್ಜ್, ಸುಳ್ಳು ಪ್ರಕರಣ, ಬಂಧನ, ಕುಟುಂಬದ ನೋವು-ಇವೆಲ್ಲ ಎದುರಿಸಿದ್ದವರು ಇವರೇ ಎಂದು ಅವರು ನೆನಪಿಸಿದರು.
ಕನ್ನಡ ವಿರೋಧಿ ಶಕ್ತಿಗಳ ವಿರುದ್ಧ ನಿಂತ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂತೆಗೆದ್ದು ನ್ಯಾಯ ಕೊಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಪುನಃ ಒತ್ತಾಯಿಸಿದ್ದಾರೆ. ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲರಿಗೆ ಮನವಿಗಳಾಗಿದ್ದರೂ ಇನ್ನೂ ಸ್ಪಷ್ಟ ನಿರ್ಧಾರ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
“ರಾಜಕೀಯ ಸ್ವಾರ್ಥಕ್ಕಾಗಿ ಪ್ರಕರಣ ವಾಪಸ್ ಸಾಧ್ಯ; ಆದರೆ ಕನ್ನಡಕ್ಕಾಗಿ ಹೋರಾಡಿದವರ ವಿಷಯದಲ್ಲಿ ಸರ್ಕಾರ ಮೌನ ಯಾಕೆ?” ಎಂದು ನಾರಾಯಣಗೌಡರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಬೆಳಗಾವಿ ಅಧಿವೇಶನಕ್ಕೂ ಮುನ್ನ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯವ್ಯಾಪಿ ಮಹಾ ಧರಣಿ, ಮುತ್ತಿಗೆ ಹೋರಾಟ, ಕಪ್ಪು ಬಟ್ಟೆ ಪ್ರತಿಭಟನೆ ಮತ್ತು ಸುವರ್ಣ ಸೌಧ ಸುತ್ತುವರಿಕೆ ಸೇರಿದಂತೆ ಕಠಿಣ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.
“ಇದು ಯಾರ ವಿರುದ್ಧದ ರಾಜಕೀಯವಲ್ಲ; ಕನ್ನಡಕ್ಕಾಗಿ ರಕ್ತ ಬೆವರು ಸುರಿಸಿದ ಹೋರಾಟಗಾರರಿಗೆ ನ್ಯಾಯ ದೊರಕಬೇಕೆಂಬ ಹೋರಾಟ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



