ಜಾತಿ ಜನಗಣತಿಯಲ್ಲಿ ಓಬಿಸಿ ಪ್ರತ್ಯೇಕ ಗುರುತು ಅಗತ್ಯ: ಚಿಗರಳ್ಳಿ ಆಗ್ರಹ

“ಜಾತಿ ಜನಗಣತಿ ವೈಜ್ಞಾನಿಕ ಮತ್ತು ಪಾರದರ್ಶಕವಾಗಿರಬೇಕು. ಓಬಿಸಿ ವರ್ಗಕ್ಕೆ ಪ್ರತ್ಯೇಕ ಗುರುತು ನೀಡದೆ ‘ಇತರೆ’ ಎಂಬ ಅಸ್ಪಷ್ಟ ವರ್ಗದಲ್ಲಿ ಸೇರಿಸುವುದು ಡೇಟಾ ನಿಖರತೆಗೆ ಧಕ್ಕೆಯುಂಟು ಮಾಡುತ್ತದೆ. ಇದರ ಪರಿಣಾಮವಾಗಿ ಭವಿಷ್ಯದ ಮೀಸಲಾತಿ ನೀತಿಗಳು ಹಾಗೂ ನೀತಿನಿರ್ಣಯಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಪ್ರಶ್ನಾವಳಿಯಲ್ಲಿ ತಕ್ಷಣ ತಿದ್ದುಪಡಿ ಮಾಡಿ ಓಬಿಸಿ ವರ್ಗವನ್ನು ಪ್ರತ್ಯೇಕವಾಗಿ ಸೇರಿಸುವುದು ಅತ್ಯಾವಶ್ಯಕ,” – ರಾಷ್ಟ್ರೀಯ ಸಮಾಜ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ, ದೇವೇಂದ್ರ ಚಿಗರಳ್ಳಿ.
ಕಲಬುರಗಿ: ರಾಜ್ಯದಲ್ಲಿ ಜಾರಿಯಾಗುತ್ತಿರುವ ಜಾತಿ ಜನಗಣತಿ ಕಾರ್ಯವನ್ನು ಸ್ವಾಗತಿಸಿ ರಾಷ್ಟ್ರೀಯ ಸಮಾಜ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ದೇವೇಂದ್ರ ಚಿಗರಳ್ಳಿ ಅವರು ಪ್ರಸ್ತುತ ಮನೆ-ಪಟ್ಟಿ ಸಂಗ್ರಹಣೆಯ ರೂಪರೇಖೆಯಲ್ಲಿ ಕಂಡುಬರುವ ಕೆಲವು ಗಂಭೀರ ಕೊರತೆಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಾತಿ ಜನಗಣತಿ ದೀರ್ಘಕಾಲದಿಂದಲೂ ಸಮಾಜದ ನ್ಯಾಯಸಮ್ಮತ ಬೇಡಿಕೆಯಾಗಿದ್ದು, ಅದನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಮಹತ್ವದ ಪ್ರಕ್ರಿಯೆಯನ್ನು ವೈಜ್ಞಾನಿಕ ಹಾಗೂ ಪಾರದರ್ಶಕವಾಗಿ ನಡೆಸುವ ನಿರೀಕ್ಷೆ ಜನರಲ್ಲಿ ಇದ್ದರೂ, ಪ್ರಸ್ತುತ ಪ್ರಶ್ನಾವಳಿಯ ವಿನ್ಯಾಸವು ಆ ನಂಬಿಕೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮನೆ-ಪಟ್ಟಿ ಪ್ರಶ್ನಾವಳಿಯ ಪ್ರಶ್ನೆ ಸಂಖ್ಯೆ 12ರಲ್ಲಿ ಸಾಮಾಜಿಕ ವರ್ಗೀಕರಣಕ್ಕಾಗಿ ಕೇವಲ ಅನುಸೂಚಿತ ಜಾತಿಗಳು (ಎಸ್ಸಿ), ಅನುಸೂಚಿತ ಜನಜಾತಿಗಳು (ಎಸ್ಟಿ) ಮತ್ತು ‘ಇತರೆ’ ಎಂಬ ಮೂರು ವಿಭಾಗಗಳನ್ನು ಮಾತ್ರ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಸಾಮಾನ್ಯ ವರ್ಗಕ್ಕೆ ಪ್ರತ್ಯೇಕ ಗುರುತು ಇಲ್ಲದಿರುವುದು ಸಂಗ್ರಹವಾಗುವ ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶಾಲ ಜನಸಂಖ್ಯೆಯನ್ನು ‘ಇತರೆ’ ಎಂಬ ಅಸ್ಪಷ್ಟ ವರ್ಗದಲ್ಲಿ ಸೇರಿಸುವುದು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿ ಸಂದರ್ಭದಲ್ಲಿ ಕಂಡುಬಂದ ದೋಷಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಓಬಿಸಿ ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗದ ಅಪಾಯವಿದ್ದು, ಸಂವಿಧಾನದ ಕಲಂ 15(4) ಮತ್ತು 16(4) ಅಡಿಯಲ್ಲಿ ನೀಡಲಾಗುವ ಮೀಸಲಾತಿ ನೀತಿಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಜೊತೆಗೆ ಭವಿಷ್ಯದ ನೀತಿನಿರ್ಣಯ ಹಾಗೂ ಕ್ಷೇತ್ರ ಪುನರ್ವಿಭಜನೆ ಪ್ರಕ್ರಿಯೆಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ಸಮಸ್ಯೆಗಳಿಗೆ ಪರಿಹಾರವಾಗಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಪ್ರಶ್ನೆ ಸಂಖ್ಯೆ 12ರಲ್ಲಿ ಓಬಿಸಿ ವರ್ಗವನ್ನು ಪ್ರತ್ಯೇಕವಾಗಿ ಸೇರಿಸುವಂತೆ ತಿದ್ದುಪಡಿ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿ ರಾಜಕೀಯ ಪಕ್ಷಗಳು, ಹಿಂದುಳಿದ ವರ್ಗ ಆಯೋಗಗಳು ಹಾಗೂ ತಜ್ಞರನ್ನು ಒಳಗೊಳ್ಳಬೇಕು. ಉಪಜಾತಿಗಳ ಮಾಹಿತಿಯನ್ನು ಸಂಗ್ರಹಿಸಲು ಸಮರ್ಪಕ ವ್ಯವಸ್ಥೆ ರೂಪಿಸಬೇಕು. ಜೊತೆಗೆ ಪ್ರಾಥಮಿಕ ಹಾಗೂ ಅಂತಿಮ ಮಾಹಿತಿಯ ಪ್ರಕಟಣೆಗೆ ಸ್ಪಷ್ಟ ವೇಳಾಪಟ್ಟಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಜನಗಣತಿಯ ಯಶಸ್ಸು ಅದರ ಆರಂಭಿಕ ಹಂತದ ನಿಖರತೆಯ ಮೇಲೆ ಅವಲಂಬಿತವಾಗಿದ್ದು, ಯಾವುದೇ ದೋಷಗಳು ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮೊದಲ ಹಂತದ ಮುಂದಿನ ಜಾರಿಗೆ ಮುನ್ನ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಅವರು ವಿನಂತಿಸಿದ್ದಾರೆ.




