ರಾಷ್ಟ್ರೀಯ ಸುದ್ದಿ

ಪಶ್ಚಿಮ ಏಷ್ಯಾ ಯುದ್ಧದ ಎಫೆಕ್ಟ್ ಭಾರತಕ್ಕೂ? | RBIಯಿಂದ ಆರ್ಥಿಕತೆ ಬಗ್ಗೆ ಮಹತ್ವದ ಎಚ್ಚರಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷವು ಭಾರತದ ಆರ್ಥಿಕ ಬೆಳವಣಿಗೆ ಹಾಗೂ ದರ ಏರಿಕೆಯ ಮೇಲೂ ಅಲ್ಪಾವಧಿಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ. ಆದಾಗ್ಯೂ, ಬಲಿಷ್ಠ ಆರ್ಥಿಕ ಅಡಿಪಾಯಗಳ ನೆರವಿನಿಂದ 2026-27ನೇ ಹಣಕಾಸು ವರ್ಷದಲ್ಲೂ ದೇಶದ ಆರ್ಥಿಕತೆ ಧನಾತ್ಮಕ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ತಿಳಿಸಿದೆ.

2026-27ನೇ ಸಾಲಿನ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ) ವೃದ್ಧಿದರ ಅಂದಾಜನ್ನು ಆರ್‌ಬಿಐ ಶೇಕಡಾ 6.9ರಲ್ಲೇ ಉಳಿಸಿಕೊಂಡಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ತಾತ್ಕಾಲಿಕವಾಗಿಯೇ ಸೀಮಿತವಾಗಿರುತ್ತದೆ ಎಂಬ ನಿರೀಕ್ಷೆಯ ಮೇರೆಗೆ ಈ ಅಂದಾಜು ಮಾಡಲಾಗಿದೆ.

ಇದೇ ವೇಳೆ, 2026-27ರ ದರ ಏರಿಕೆ ಪ್ರಮಾಣವನ್ನು ಶೇಕಡಾ 4.6 ಎಂದು ನಿರೀಕ್ಷಿಸಲಾಗಿದ್ದು, ಅಪಾಯಗಳು ಇನ್ನೂ ಏರಿಕೆಯ ದಿಕ್ಕಿನಲ್ಲಿವೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಕಚ್ಚಾ ತೈಲ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆಯನ್ನು ಆರ್‌ಬಿಐ ಪ್ರಮುಖ ಚಿಂತೆಯಾಗಿ ಗುರುತಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷ ಮತ್ತಷ್ಟು ತೀವ್ರಗೊಂಡರೆ ಜಾಗತಿಕ ಹಾಗೂ ದೇಶೀಯ ಮಟ್ಟದಲ್ಲಿ ದರ ಏರಿಕೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

“ಜಿಯೋಪಾಲಿಟಿಕಲ್ ಉದ್ವಿಗ್ನತೆ ಮುಂದುವರಿದಿರುವುದರಿಂದ ದರ ಏರಿಕೆ ಮೇಲೆ ಮೇಲ್ಮುಖದ ಒತ್ತಡಗಳಿವೆ. ಇಂಧನ ದರಗಳ ಏರಿಕೆ ಹಾಗೂ ಪ್ರಮುಖ ಸಾಗಣೆ ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೂರೈಕೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ 2026ರಲ್ಲಿ ಶೇಕಡಾ 3.1ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಆರ್‌ಬಿಐ ಅಂದಾಜಿಸಿದೆ. ಜಾಗತಿಕ ವ್ಯಾಪಾರದ ಪ್ರಮಾಣದ ವೃದ್ಧಿ ಶೇಕಡಾ 2.8ರ ಮಟ್ಟದಲ್ಲಿರಬಹುದು ಎಂದು ಹೇಳಿದ್ದು, ಇಂಧನ ದರ ಏರಿಕೆ ಹಾಗೂ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಜಾಗತಿಕ ವ್ಯಾಪಾರಕ್ಕೂ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಬಾಹ್ಯ ಸವಾಲುಗಳ ನಡುವೆಯೂ ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಆರ್‌ಬಿಐ ಹೇಳಿದೆ. 2025-26ರಲ್ಲಿ ಭಾರತದ ಆರ್ಥಿಕತೆ ಶೇಕಡಾ 7.6ರಷ್ಟು ವೃದ್ಧಿಯಾಗಿದ್ದು, ಹಿಂದಿನ ವರ್ಷ ಇದು ಶೇಕಡಾ 7.1ರಷ್ಟಿತ್ತು.

ದೇಶೀಯ ಬಳಕೆ ಹೆಚ್ಚಳ, ಹೂಡಿಕೆಗಳ ನಿರಂತರತೆ, ಸರ್ಕಾರದ ಪ್ರೋತ್ಸಾಹಕಾರಿ ನೀತಿಗಳು ಹಾಗೂ ಬಲಿಷ್ಠ ಆರ್ಥಿಕ ಅಡಿಪಾಯಗಳು ಈ ಬೆಳವಣಿಗೆಗೆ ಕಾರಣ ಎಂದು ವರದಿ ವಿವರಿಸಿದೆ.

“ಕೋರ್ಪೊರೇಟ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಸುಧಾರಿತ ಹಣಕಾಸು ಸ್ಥಿತಿ ಹಾಗೂ ಸರ್ಕಾರದ ಮೂಲಸೌಕರ್ಯ ಹೂಡಿಕೆಗಳ ಮೇಲಿನ ಒತ್ತಡವು ಭಾರತದ ಬೆಳವಣಿಗೆಗೆ ಪೂರಕವಾಗಲಿದೆ” ಎಂದು ಆರ್‌ಬಿಐ ತಿಳಿಸಿದೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಉತ್ತಮ ಆಸ್ತಿ ಗುಣಮಟ್ಟ, ಸ್ಥಿರ ಸಾಲ ವೃದ್ಧಿ ಹಾಗೂ ಸಮರ್ಪಕ ಬಂಡವಾಳದ ನೆರವಿನಿಂದ ಬಲಿಷ್ಠವಾಗಿದೆ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ. ಆದರೆ ಮುಂದುವರಿದ ಜಾಗತಿಕ ಉದ್ವಿಗ್ನತೆಗಳು ಕಂಪನಿಗಳ ಲಾಭದಾಯಕತೆ ಹಾಗೂ ಸಾಲ ಪೋರ್ಟ್‌ಫೋಲಿಯೊಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಆದರೆ, ಸಮರ್ಪಕ ಆಹಾರ ಧಾನ್ಯ ಸಂಗ್ರಹ, ಕೃಷಿ ಕ್ಷೇತ್ರದ ಸ್ಥಿರ ಪರಿಸ್ಥಿತಿ ಹಾಗೂ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಲಭ್ಯತೆ ದರ ಏರಿಕೆಯನ್ನು ನಿಯಂತ್ರಣದಲ್ಲಿಡಲು ನೆರವಾಗಲಿದೆ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.

Show More

Related Articles

Leave a Reply

Your email address will not be published. Required fields are marked *

Back to top button