ಶಿವಶಕ್ತಿ ಬಡಾವಣೆಯಲ್ಲಿ ₹25 ಲಕ್ಷ ವೆಚ್ಚದ ಗ್ರಂಥಾಲಯಕ್ಕೆ ಭೂಮಿಪೂಜೆ

ಕಲಬುರಗಿ: ನಗರದ ವಾರ್ಡ್ ನಂ.55ರ ಶಿವಶಕ್ತಿ ಬಡಾವಣೆಯ ಉದ್ಯಾನವನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅನುದಾನದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ವತಿಯಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯ ಕಟ್ಟಡದ ಕಾಮಗಾರಿಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ಬಡಾವಣೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಓದು ಮತ್ತು ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಂಥಾಲಯವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಸಹಕಾರಿಯಾಗಲಿದೆ. ಬಡಾವಣೆಯಲ್ಲಿ ಓದುವ ವಾತಾವರಣ ನಿರ್ಮಾಣವಾಗಲು ಇಂತಹ ಸಾರ್ವಜನಿಕ ಸೌಲಭ್ಯಗಳು ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರ ಮಹೇಶ್ ಹೊಸೂರ್ಕರ್, ಮುಖಂಡರಾದ ಬಿ.ಸಿ. ಹೂಗಾರ, ಬಸವಂತರಾಯಗೌಡ ಬಿರಾದಾರ, ಸಂತೋಷ ಚೌರಗಿ, ರವಿ ವಿಭೂತಿ, ವಿಶ್ವರಾಜ್ ಟಕ್ಕಳಕಿ, ಬಸವರಾಜ್, ಶರಣು ಅವಿರಾದಿ, ದುಶೇಷ ಪಾಟೀಲ, ರತ್ನಗೌಡ ಪಾಟೀಲ, ಮೂಲಭಾರತಿ, ದೇವೇಂದ್ರ ಅವಂಟಿ ಸೇರಿದಂತೆ ಶಿವಶಕ್ತಿ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.



