ವಿಶ್ವವೇ ಗೌರವಿಸುವ ಏಕಮಾತ್ರ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ : ಡಾ. ಅನೀಲ್ ಟೆಂಗಳಿ

ಜೇವರ್ಗಿ: ಸರ್ವಜನರಿಗೆ ಸಮಾನತೆ ಹಾಗೂ ಹಕ್ಕುಗಳನ್ನು ನೀಡಿದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ದೆಕ್ಕನ್ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕ ಡಾ. ಅನಿಲಕುಮಾರ ಟೆಂಗಳಿ ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಅವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಅನಿಲಕುಮಾರ ಟೆಂಗಳಿ, “ಈ ದೇಶದ ಮಹಿಳೆಯರ ಹಕ್ಕುಗಳಿಗಾಗಿ ಅಪಾರ ಶ್ರಮ ಪಟ್ಟವರು ಅಂಬೇಡ್ಕರ್. ಕಾರ್ಮಿಕರ 14 ಗಂಟೆಗಳ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿದವರು. ಪ್ರತಿಯೊಬ್ಬ ಭಾರತೀಯನಿಗೂ ಇಷ್ಟದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ಹಾಗೂ ಶಿಕ್ಷಣ ಪಡೆಯುವ ಹಕ್ಕುಗಳನ್ನು ಅವರು ಒದಗಿಸಿದ್ದಾರೆ” ಎಂದು ಹೇಳಿದರು.
“ಈ ಎಲ್ಲ ಹಕ್ಕುಗಳಿಗೆ ಅಡ್ಡಿಯಾಗದಂತೆ ಕಾನೂನು ರೂಪಿಸಿದ ಮಹಾನ್ ಚಿಂತಕ ಅವರು. ನೀಲಿ ಬಣ್ಣವನ್ನು ಶ್ರಮದ ಸಂಕೇತವಾಗಿ ಬಳಸಿದವರು” ಎಂದರು.
ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆ, ಪ್ಲೆಕ್ಸ್ ಮತ್ತು ಘೋಷಣೆಗಳಿಗೆ ಸೀಮಿತಗೊಳಿಸದೇ, ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, “ಸಮಾನತೆ, ಭ್ರಾತೃತ್ವ ಹಾಗೂ ಸಹಬಾಳ್ವೆಯ ಮೌಲ್ಯಗಳ ಮೇಲೆ ನಿಂತ ಭವ್ಯ ಭಾರತವನ್ನು ನಿರ್ಮಿಸಿದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಸಿಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಂಭುಲಿಂಗ ದೇಸಾಯಿ, ರವಿಚಂದ್ರ ರೆಡ್ಡಿ, ಸತೀಶಕುಮಾರ ಸಂಗಾಣ, ರಾಜೇಸಾಹೇಬ್ ನಧಾಫ್, ವಿರಣ್ಣ ಬೊಮ್ಮನಳ್ಳಿ, ಶೌಕತ್ ಅಲಿ ಆಲೂರ, ಪ್ರತಾಪ್ ಕಟ್ಟಿ, ಭಗವಂತರಾಯಗೌಡ ಪಾಟೀಲ್ ಅಂಕಲಗಾ, ಪುಂಡಲಿಕ ಗಾಯಕವಾಡ್, ದಾನಪ್ಪಗೌಡ ಹಳಿಮನಿ, ಮಕಬುಲ್ ಪಟೇಲ್ ಕಾಚೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.



