ಅನಿಮಿಯಾ ಮುಕ್ತ ಭಾರತ ಅಭಿಯಾನ:ಉಚಿತ ರಕ್ತಪರಿಶೀಲನೆ ಮತ್ತು ಔಷಧಿ ವಿತರಣೆ

ಕಲಬುರಗಿ: ಅನಿಮಿಯಾ ಮುಕ್ತ ಭಾರತ ಮಾಡುವ ಉದ್ದೇಶದಿಂದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮಾರ್ಗದರ್ಶಿ ಸಂಸ್ಥೆ ಕಲಬುರಗಿ ಹಾಗೂ ಐಆರ್ಡಿ ರಾಜೇಂದ್ರ ಆಸ್ಪತ್ರೆ, ಸ್ಪಂದನ ಸಂಸ್ಥೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತಹೀನತೆ ತಡೆಗಟ್ಟುವ ವಿಶೇಷ ಕಾರ್ಯಕ್ರಮವನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಡಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ಉಚಿತ ರಕ್ತಪರಿಶೀಲನೆ ನಡೆಸಿ, ರಕ್ತಹೀನತೆ ಹೊಂದಿರುವವರಿಗೆ ಉಚಿತವಾಗಿ ಔಷಧಿ ಮತ್ತು ಟಾನಿಕ್ ವಿತರಿಸಲಾಯಿತು. ಕಲಬುರಗಿ ಜಿಲ್ಲೆಯಲ್ಲಿ ರಕ್ತಹೀನತೆ ಗಂಭೀರ ಸಮಸ್ಯೆಯಾಗಿದ್ದು, ಇಲ್ಲಿ 64% ಮಕ್ಕಳು ಮತ್ತು 53% ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುವುದು ರಾಜ್ಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ರಕ್ತಹೀನತೆಯ ಪ್ರಮುಖ ಕಾರಣಗಳಲ್ಲಿ ಕಬ್ಬಿಣಾಂಶದ ಕೊರತೆ, ಪೌಷ್ಠಿಕ ಆಹಾರದ ಅಭಾವ, ರಕ್ತಸ್ರಾವ ಮತ್ತು ದೀರ್ಘಕಾಲದ ಕಾಯಿಲೆಗಳು ಸೇರಿವೆ. ಆಯಾಸ, ದೌರ್ಬಲ್ಯ, ತೆಳು ಚರ್ಮ, ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಇದರ ಪ್ರಮುಖ ಲಕ್ಷಣಗಳಾಗಿವೆ.
ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶಯುಕ್ತ ಹಾಗೂ ಪೌಷ್ಠಿಕ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಮತ್ತು ರಕ್ತಪರಿಶೀಲನೆ ಅಗತ್ಯವಾಗಿದೆ. ರಕ್ತಹೀನತೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಲಾಗಿದೆ.
ಈವರೆಗೆ ಸುಮಾರು 35,000 ಮಂದಿಗೆ ಉಚಿತ ರಕ್ತಪರಿಶೀಲನೆ ನಡೆಸಿ, ಅಗತ್ಯ ಔಷಧಿ ಮತ್ತು ಟಾನಿಕ್ ವಿತರಿಸಲಾಗಿದೆ ಎಂದು ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



