ಶ್ರಾವಣ ಸೋಮವಾರದಂದು ಭಜನಾ ಕಾರ್ಯಕ್ರಮ

ಕಲಬುರಗಿ: ನಗರದ ಜಗತ್ ಪ್ರದೇಶದಲ್ಲಿರುವ ಶ್ರೀ ಶರಣ ದೊಹರ ಕಕ್ಕಯ್ಯ ದೇವಸ್ಥಾನದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಪ್ರಥಮ ಶ್ರಾವಣ ಸೋಮವಾರದ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ದೊಹರ ಕಕ್ಕಯ್ಯ ಸಮಾಜದ ವಿನಾಯಕ ಕಟ್ಟಕೆ ಅವರ ಪುತ್ರಿ ಕುಮಾರಿ ಸ್ಮಿತಾ ವಿನಾಯಕ ಕಟ್ಟಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 2026ರ ಮೇ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶರಣ ದೊಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸೈಬಣ್ಣ ಹೊಳ್ಕರ್ ಮಾತನಾಡಿ, “ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತ್ಯಂತ ಕಠಿಣ ಸಾಧನೆ. ನಮ್ಮ ಸಮಾಜದ ಯುವತಿ ಸ್ಮಿತಾ ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಸಮಾಜಕ್ಕೆ ಹೆಮ್ಮೆಯ ವಿಷಯ. ಅವರ ಸಾಧನೆ ಇತರ ಯುವಕ-ಯುವತಿಯರಿಗೆ ಪ್ರೇರಣೆಯಾಗಲಿ” ಎಂದು ಶುಭ ಹಾರೈಸಿದರು.
ಡಾ. ತುಳಜಾರಾಮ ಗಾಯದನಕರ್ ಸ್ವಾಗತಿಸಿದರು. ಡಾ. ಲಕ್ಷ್ಮಣ ಕವಳೆ ಕಾರ್ಯಕ್ರಮ ನಿರೂಪಿಸಿದರು. ಸೂರ್ಯಕಾಂತ ಸಾವಳ್ಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ನ ನಿರ್ದೇಶಕರಾದ ಗಣೇಶ್ ಕವಳೆ, ಬಾಬುರಾವ ಕಟ್ಟಕೆ, ಶ್ರೀಮಂತ ಇಂಗಳೆ, ರಮೇಶ್ ಗಾಯದನಕರ್, ಸುಭಾಷ್ಚಂದ್ರ ತ್ರಿಮುಖೆ, ಮನೋಹರ ಮಹಾವಕರ್, ಅಶೋಕ ಖರಾಟಮಲ್, ಮಲ್ಲಿಕಾರ್ಜುನ ಖರಾಟಮಲ್, ಅರ್ಜುನ ಸೋನಕವಡೆ, ಜಗನ್ನಾಥ ಇಂಗಳೆ ಸೇರಿದಂತೆ ಸಮಾಜದ ಮುಖಂಡರು, ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಶ್ರೀ ಶರಣ ದೊಹರ ಕಕ್ಕಯ್ಯ ಅವರ ಆಶೀರ್ವಾದ ಪಡೆದರು.



