ವೆಂಕಟೇಶ್ವರ ಕಾಲೋನಿಯಲ್ಲಿ ಸರಣಿ ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ಡಿಸೆಂಬರ್ 30ರ ರಾತ್ರಿ ಸುಮಾರು 3 ಗಂಟೆ ವೇಳೆಗೆ ಮನೆ ಕಳ್ಳತನ ನಡೆದಿರುವ ಘಟನೆ ವರದಿಯಾಗಿದ್ದು, ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಕಾಟಮದೇವರಹಳ್ಳಿಯ ರಮೇಶ ಶರಣಪ್ಪ ಬೋವಿ ಅವರ ಮನೆಯಲ್ಲಿ ಇದ್ದ ಸುಮಾರು 1 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ ನಗದು ₹1,500 ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಇದೇ ಕಾಲೋನಿಯ ಸುರೇಶ ಸರಾಫ್ ಹಾಗೂ ಲಕ್ಷ್ಮಣ ಸರಾಫ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದವರು ಸುಮಾರು ಒಂದು ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ನಂತರ ಬಾಗಿಲಿನ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಜಗನ್ನಾಥ ಗುತ್ತೇದಾರ ಚಂದಯ್ಯ ಗುತ್ತೇದಾರ ಅವರ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ನ್ನು ಕಳ್ಳರು ಅಪಹರಿಸಿರುವುದಾಗಿ ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ, ಸಿದ್ದು ಮಡಿವಾಳ, ಅನೀಲ್ ಕುಮಾರ, ರವಿಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿಯೂ ತನಿಖೆಯಲ್ಲಿ ಭಾಗವಹಿಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.



