ರಾಜ್ಯಸುದ್ದಿ

ಜೆಸಿಬಿ, ಕ್ರೇನ್‌ಗೂ ಬಗ್ಗದ ‘ಖಡೇ ಹನುಮಾನ್’

ಮೂರ್ತಿ ಸ್ಥಳಾಂತರಕ್ಕೆ ನಾಲ್ಕು ಬಾರಿ ಯತ್ನ; ಭಕ್ತರಲ್ಲಿ ಅಚ್ಚರಿ–ಭಕ್ತಿ

ಉಜ್ಜಯಿನಿ: ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಸ್ಥಳಾಂತರಿಸಲು ಪ್ರಯತ್ನಿಸಿದರೂ, ಜೆಸಿಬಿ, ಭಾರಿ ಕ್ರೇನ್‌ಗಳು ಹಾಗೂ ಆಧುನಿಕ ಯಂತ್ರೋಪಕರಣಗಳ ನೆರವಿನಿಂದಲೂ ಒಂದಿಂಚೂ ಅಲುಗಾಡದ ಉಜ್ಜಯಿನಿಯ ಪ್ರಸಿದ್ಧ ‘ಖಡೇ ಹನುಮಾನ್’ ಮೂರ್ತಿ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಉಜ್ಜಯಿನಿಯ ಸತಿ ಗೇಟ್‌ ಬಳಿಯಿರುವ ಸುಮಾರು 170 ವರ್ಷಗಳಷ್ಟು ಹಳೆಯದಾದ ಖಡೇ ಹನುಮಾನ್ ದೇವಾಲಯವು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಿಂದಾಗಿ ಭಾರಿ ಗಮನ ಸೆಳೆದಿದೆ. ಮೂರ್ತಿಯನ್ನು ಸ್ಥಳಾಂತರಿಸಲು ಸೆಪ್ಟೆಂಬರ್‌ 4 ಮತ್ತು 5ರಂದು ನಾಲ್ಕು ಬಾರಿ ಪ್ರಯತ್ನಿಸಲಾಯಿತು. ಆದರೆ, ಮೂರ್ತಿ ಅಲುಗಾಡದ ಹಿನ್ನೆಲೆಯಲ್ಲಿ ಸ್ಥಳಾಂತರ ಕಾರ್ಯಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

2028ರ ಸಿಂಹಸ್ಥ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಉಜ್ಜಯಿನಿಯಲ್ಲಿ ಕಾಂತಲ್ ಚೌಕ್‌ನಿಂದ ಛತ್ರಿ ಚೌಕ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿರುವ ಹಳೆಯ ದೇವಾಲಯವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಇದರ ಭಾಗವಾಗಿದೆ.

ಮೂರ್ತಿಗೆ ಯಾವುದೇ ಹಾನಿಯಾಗದಂತೆ ಸ್ಥಳಾಂತರಿಸಲು ಆಡಳಿತವು ತಾಂತ್ರಿಕ ತಜ್ಞರ ನೆರವು ಪಡೆದಿದೆ. ಇಂದೋರ್‌ನಿಂದ ಎಂಜಿನಿಯರ್‌ಗಳು ಹಾಗೂ ತಜ್ಞರ ತಂಡವನ್ನು ಕರೆಸಿ, ಎರಡು ದಿನಗಳ ಕಾಲ ಮೂರ್ತಿಯ ಬುಡ ಮತ್ತು ಸುತ್ತಲಿನ ರಚನೆಯನ್ನು ಪರಿಶೀಲಿಸಲಾಗಿದೆ. ಮೂರ್ತಿಯ ಅಡಿಭಾಗದ ಸ್ಥಿತಿ ತಿಳಿಯಲು ಸುಮಾರು ಒಂದೂವರೆ ಅಡಿ ಆಳದ ಗುಂಡಿಯನ್ನೂ ತೋಡಲಾಗಿದೆ. ಆದರೂ, ಸುಮಾರು ಎಂಟು ಅಡಿ ಎತ್ತರದ ನಿಂತಿರುವ ಹನುಮಂತನ ಮೂರ್ತಿಯನ್ನು ಕದಲಿಸಲು ಸಾಧ್ಯವಾಗಿಲ್ಲ.

ಮೂರ್ತಿಯು ನೆಲದಡಿಯಲ್ಲಿರುವ ಬಂಡೆಯ ಮೇಲೆ ಸ್ಥಾಪಿತವಾಗಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸ್ಥಳಾಂತರ ಕಾರ್ಯ ಸವಾಲಾಗಿ ಪರಿಣಮಿಸಿದೆ. ಮೂರ್ತಿಗೆ ಮಳೆ ಸೇರಿದಂತೆ ಹವಾಮಾನದಿಂದ ಹಾನಿಯಾಗದಂತೆ ಆಡಳಿತವು ಸದ್ಯ ಮೇಲಾವರಣ ನಿರ್ಮಿಸಿದೆ.

‘ಡಾಕ್ಟರ್ ಹನುಮಾನ್’ ಎಂದೇ ಪ್ರಸಿದ್ಧ

‘ಖಡೇ ಹನುಮಾನ್’ ಎಂದರೆ ನಿಂತಿರುವ ಆಂಜನೇಯನ ವಿಗ್ರಹ. ಸ್ಥಳೀಯ ಭಕ್ತರಲ್ಲಿ ಈ ದೇವಾಲಯಕ್ಕೆ ವಿಶೇಷ ನಂಬಿಕೆ ಇದೆ. ಅನಾರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುವವರು ವೈದ್ಯರನ್ನು ಭೇಟಿ ಮಾಡುವ ಮೊದಲು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ ಎಂಬ ನಂಬಿಕೆ ಇದೆ.

ವಿಶೇಷವಾಗಿ ಮಕ್ಕಳ ಆರೋಗ್ಯ ಹಾಗೂ ಸಮಸ್ಯೆಗಳು ನಿವಾರಣೆಯಾಗಲೆಂದು ತಾಯತ, ಬೂದಿ ಸೇರಿದಂತೆ ವಿವಿಧ ಹರಕೆಗಳನ್ನು ಸಲ್ಲಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಕಾರಣದಿಂದಲೇ ಭಕ್ತರು ಹನುಮಂತನನ್ನು ಪ್ರೀತಿಯಿಂದ ‘ಡಾಕ್ಟರ್ ಹನುಮಾನ್’ ಎಂದೂ ಕರೆಯುತ್ತಾರೆ.

ಮಕ್ಕಳಿಗಾಗಿ ಹರಕೆ ಹೊತ್ತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಹಿಂದೂ ಕುಟುಂಬಗಳ ಜೊತೆಗೆ ಮುಸ್ಲಿಂ ಸಮುದಾಯದವರೂ ಹರಕೆ ತೀರಿಸಲು ಇಲ್ಲಿಗೆ ಬರುತ್ತಾರೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ನಾಲ್ಕೇ ದಿನಗಳಲ್ಲಿ 8 ಸಾವಿರಕ್ಕೂ ಅಧಿಕ ಭಕ್ತರು

ಮೂರ್ತಿ ಸ್ಥಳಾಂತರದ ಸುದ್ದಿ ಹರಡಿದ ಬಳಿಕ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 8,000ಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದ ವಿವಿಧ ಭಾಗಗಳಷ್ಟೇ ಅಲ್ಲದೆ ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದಲೂ ಭಕ್ತರು ಉಜ್ಜಯಿನಿಗೆ ಆಗಮಿಸುತ್ತಿದ್ದಾರೆ.

ಇದರ ಮಧ್ಯೆ ದೇವಾಲಯದ ಬಳಿ ಕೆಲ ಮಂಗಗಳು ಕಾಣಿಸಿಕೊಂಡಿರುವುದು ಕೂಡ ಭಕ್ತರ ಗಮನ ಸೆಳೆದಿದೆ. ಮಂಗಗಳ ಆಗಮನವನ್ನೂ ಹನುಮಂತನೊಂದಿಗೆ ತಳುಕು ಹಾಕಿ ಭಕ್ತರು ಚರ್ಚಿಸುತ್ತಿದ್ದಾರೆ.

ದೇವಾಲಯ ಉಳಿಸುವಂತೆ ಉಮಾ ಭಾರತಿ ಮನವಿ

ಖಡೇ ಹನುಮಾನ್ ದೇವಾಲಯವನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.

ಮತ್ತೊಂದೆಡೆ, ಮೂರ್ತಿಯ ಸ್ಥಳಾಂತರದ ಕುರಿತು ಸರ್ಕಾರವೂ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಭಕ್ತರ ಧಾರ್ಮಿಕ ನಂಬಿಕೆ ಹಾಗೂ ಪ್ರತಿಮೆಯ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದೆ.

ಸದ್ಯ ಜೆಸಿಬಿ ಹಾಗೂ ಕ್ರೇನ್‌ಗಳ ಪ್ರಯತ್ನಕ್ಕೂ ಬಗ್ಗದ ಖಡೇ ಹನುಮಾನ್ ಮೂರ್ತಿ, ಉಜ್ಜಯಿನಿಯಲ್ಲಿ ಭಕ್ತಿ–ಅಚ್ಚರಿಯ ಚರ್ಚೆಗೆ ಕಾರಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button