ಅಂಬೇಡ್ಕರ್ ಪುತ್ಥಳಿ ಸುತ್ತ ₹50 ಲಕ್ಷ ವೆಚ್ಚದ ಕಾಂಪೌಂಡ್ ಕಾಮಗಾರಿಗೆ ಚಾಲನೆ

ಚಿತ್ತಾಪುರ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಸುತ್ತ ನೂತನ ಕಾಂಪೌಂಡ್ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರೋತ್ಥಾನ ಫೇಸ್ 4 ವಿಶೇಷ ಅನುದಾನ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿ ಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಅಂಬೇಡ್ಕರ್ ಪುತ್ಥಳಿಗೆ ಹೊಂದುವಂತೆ ಸುಸಜ್ಜಿತ ಹಾಗೂ ಆಕರ್ಷಕ ಕಾಂಪೌಂಡ್ ನಿರ್ಮಿಸಬೇಕು. 2027ರ ಏಪ್ರಿಲ್ 14ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿಗೂ ಮುನ್ನ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಅಂಬೇಡ್ಕರ್ ಪುತ್ಥಳಿಯ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರದಿಂದ ₹50 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಇರುವ ಅಂಬೇಡ್ಕರ್ ಪುತ್ಥಳಿಯ ಬದಲಿಗೆ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ದೊಡ್ಡ ಪುತ್ಥಳಿಯನ್ನು ಸ್ಥಾಪಿಸಲು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಈಗ ಕೈಗೆತ್ತಿಕೊಂಡಿರುವ ಕಾಂಪೌಂಡ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಕಳಪೆತನಕ್ಕೆ ಅವಕಾಶ ನೀಡದೇ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣುರಕರ್, ಶ್ರೀಕಾಂತ್ ಸಿಂಧೆ, ಜಗನಾಥ್ ಮೂಡಬುಳಕರ್, ದೇವಿಂದ್ರ ಕುಮಸಿ, ರಾಜಪ್ಪ ಹುಂಡೇಕರ್, ನಾಗು ಕಲ್ಲಕ್, ನಾಗೇಂದ್ರ ಬುರ್ಲಿ, ಮಲ್ಲಿಕಾರ್ಜುನ ಕಲ್ಮರಿ, ಬಸವರಾಜ್ ಮೂಡಬೂಳಕರ್, ಕಾರ್ತಿಕ್ ಕಲ್ಲಕ್, ಶಿವು ಆರಬೋಳ, ಪುರಸಭೆ ಜೆಇ ಭೀಮರಾವ್ ಪಾಟೀಲ, ಸಿಬ್ಬಂದಿಗಳಾದ ಲೋಹಿತ್ ಕಟ್ಟಿಮನಿ, ರಾಜಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



