₹30 ಲಕ್ಷ ವಂಚನೆ ಆರೋಪ: ಮಧ್ಯರಾತ್ರಿ ವೃದ್ಧಾಶ್ರಮಕ್ಕೆ ಅಧಿಕಾರಿಯ ದಿಢೀರ ಭೇಟಿ

ಕಲಬುರಗಿ: ಸೇಡಂ ತಾಲೂಕಿನ ವೃದ್ಧಾಶ್ರಮದ ವಿರುದ್ಧ ಕೇಳಿಬಂದ ಆರೋಪಗಳ ಹಿನ್ನೆಲೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಅವರು ಬುಧವಾರ ಮಧ್ಯರಾತ್ರಿ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಲಿಂಗರಾಜ ತಾರಫೈಲ್ ಅವರು ವಿಜಯಲಕ್ಷ್ಮಿ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘದ ಮೂಲಕ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಸುಮಾರು ₹30 ಲಕ್ಷ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಕುರಿತು ದೊರಕಿದ ದೂರಿನ ಮೇರೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ರಾತ್ರಿ ವೇಳೆ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿನ ಆಹಾರ ವ್ಯವಸ್ಥೆ, ಫಲಾನುಭವಿಗಳ ಪರಿಸ್ಥಿತಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿನ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಇಂತಹ ಆರೋಪಗಳ ಪರಿಶೀಲನೆಯಲ್ಲಿ ವಿಳಂಬವಾಗುವ ಸಂದರ್ಭಗಳ ನಡುವೆ, ತಕ್ಷಣ ಕ್ರಮ ಕೈಗೊಂಡ ಅಧಿಕಾರಿಯ ನಡೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.ಇದೇ ವೇಳೆ, ಕೆಲವರು ಸುಳ್ಳು ಆರೋಪಗಳ ಮೂಲಕ ಸಮಾಜ ಸೇವಕರು ಹಾಗೂ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಲ ಸಮಾಜ ಚಿಂತಕರು ಆಗ್ರಹಿಸಿದ್ದಾರೆ.ಸುಳ್ಳು ದೂರಿನ ಆಧಾರದ ಮೇಲೆ ನಿರಪರಾಧಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.



