ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಡಬೇಕು: ರವಿ ದೇಗಾಂವ

ಕಲಬುರಗಿ: ಕರ್ನಾಟಕ ನವ ನಿರ್ಮಾಣ ಸೇನೆಯ ಕಲಬುರಗಿ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಮಹಾದೇವ ನಗರದ ಶ್ರೀ ಮಲ್ಲಿಕಾರ್ಜುನ ಎಂ. ಜಮಾದಾರ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆಯ ಜಿಲ್ಲಾಧ್ಯಕ್ಷ ರವಿ ಎನ್. ದೇಗಾಂವ ಅವರು ನೇಮಕಾತಿ ಆದೇಶ ನೀಡಿ, ವಿದ್ಯಾರ್ಥಿ ಘಟಕದ ಜವಾಬ್ದಾರಿ ವಹಿಸಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ದೇಗಾಂವ, ಕನ್ನಡ ನಾಡು–ನುಡಿ, ಗಡಿ, ಜಲ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗಿ, ಅವುಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದು ವಿದ್ಯಾರ್ಥಿ ಘಟಕದ ಪ್ರಮುಖ ಉದ್ದೇಶವಾಗಬೇಕು ಎಂದರು.
ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸಿ ವಿದ್ಯಾರ್ಥಿಗಳ ಹಕ್ಕುಗಳನ್ನು ದೊರಕಿಸಿಕೊಡಬೇಕು ಎಂದು ಹೇಳಿದರು.
‘ಕರ್ನಾಟಕಕ್ಕಾಗಿ ನಾನು, ನಮಗಾಗಿ ಕರ್ನಾಟಕ’ ಎಂಬ ಸಂಘಟನೆಯ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ, ಜಾತ್ಯತೀತ, ಪಕ್ಷಾತೀತ, ರಾಜಿರಹಿತ ಹಾಗೂ ರಾಜಕೀಯ ರಹಿತ ಹೋರಾಟವನ್ನು ಕೈಗೊಳ್ಳಬೇಕು. ಸಂಘಟನೆಯ ತತ್ವ, ಸಿದ್ಧಾಂತ ಹಾಗೂ ಹೆಸರಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿ, ಕರ್ನಾಟಕ ನವ ನಿರ್ಮಾಣ ಸೇನೆಯ ಹೆಸರು ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳ ಮನೆ–ಮನಗಳಲ್ಲಿ ನೆಲೆಸುವಂತೆ ತಮ್ಮ ಕಾರ್ಯದ ಮೂಲಕ ತೋರಿಸಬೇಕು ಎಂದು ರವಿ ದೇಗಾಂವ ಕರೆ ನೀಡಿದರು.
ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಜಮಾದಾರ ಅವರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘಟನೆಯ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.



